ಆಳ್ವಾಸ್ ನುಡಿಸಿರಿಗೆ ಮೊದಲ ಸಲ ಭೇಟಿ ನೀಡಿದ್ದೆ. ಅಲ್ಲಿ ನಡೆಯುತ್ತಿದ್ದ ಕವನ ಗೋಷ್ಠಿಯಲ್ಲಿ ಕುಳಿತಿದ್ದೆ. ಕಾರಣ ನಾನೂ ಕವನ ಬರೆಯಬೇಕೆಂಬ ಬಯಕೆ ನನ್ನನ್ನು ಅಲ್ಲಿ ಕುಳಿಸಿತ್ತು.
ಮೌನ ಮಾತಾಡಿತು ಎಂಬ ಕವನದ ಪ್ರಾರಂಭ ಕೇಳಿ ನನ್ನ ಮನಸ್ಸು ಯೋಚನೆಗೆ ಪ್ರಾರಂಭಿಸಿತು. ಮೌನ ಎಂದರೆ ಮಾತಿಲ್ಲದ್ದು ಎಂದಷ್ಟೇ ತಿಳಿದಿದ್ದ ನನಗೆ ಇದು ಅತ್ಯಂತ ಕುತೂಹಲ ಮೂಡಿಸಿತು.
ಮೌನ ಮಾತಾಡಲು ಸಾಧ್ಯವಾ? ಇದಕ್ಕೆ ಬೇರೊಂದು ಅರ್ಥ ಕಲ್ಪಿಸಬಹುದಾ? ಕಲ್ಪಿಸಬಹುದಾದರೆ ಯಾವೆಲ್ಲ ಅರ್ಥ ಕಲ್ಪಿಸಬಹುದು ಎಂಬೆಲ್ಲಾ ಪ್ರಶ್ನೆಗಳು ನನ್ನನ್ನು ಬಹುವಾಗಿ ಕಾಡಲಾರಂಭಿಸಿದವು. ಯೋಚಿಸಿದಂತೆ ಮೌನಕ್ಕೆ ಹೊಸ ಹೊಸ ಅರ್ಥಗಳು ಸಿಗಲಾರಂಭಿಸಿದವು. ಯಾವುದೇ ವಿಷಯದ ಗಟ್ಟಿತನಕ್ಕೆ ಮೌನ ಸಾಕ್ಷಿಯಾಗಬಲ್ಲುದು.
ಮಾತು ಮುರಿದ ಮಾತ್ರಕ್ಕೆ ಎಲ್ಲ ಮುಗಿಯಿತು ಎಂದಲ್ಲ. ಸಂದರ್ಭಕ್ಕೆ ತಕ್ಕಂತೆ ಇದರ ವ್ಯಕ್ತಿತ್ವ ಬದಲಾಗುತ್ತಲೇ ಇರುತ್ತದೆ. ಸಂತಸ, ತೃಪ್ತಿ, ಸಿಟ್ಟು, ಆಕ್ರೋಶ ಓ... ಇದರ ಮುಖ ಊಹೆಗೆ ನಿಲುಕದ್ದು......
ಇದ್ಯಾಕೆ ಇವಳು ಪುರಾಣ ಬರೀತಾ ಇದಾಳೆ ಎಂದು ಬೇಸರಿಸಿಕೊಳ್ಳಬೇಡಿ. ಮೌನಕ್ಕೆ ಮೌನವೊಂದೇ ಸಾಟಿ ಎಂದು ಭಾವಿಸಿದ್ದ ನನಗೆ ಅದಕ್ಕೂ ಮಾತಿದೆ ಎಂದು ತಿಳಿದ ಮೇಲೆ ಸುಮ್ಮನಿರಲಾಗಲಿಲ್ಲ. ಬರವಣಿಗೆಯ ವಿಷಯದಲ್ಲಿ ಯಾವತ್ತೂ ಮೌನವಾಗಿದ್ದ ನಾನೂ ಅದಕ್ಕೊಂದು ದನಿ ಹುಡುಕಬೇಕೆಂದು ಬಯಸಲು ಪ್ರಾರಂಭಿಸಿದೆ. ನನ್ನಲ್ಲಿನ ಇಂದಿನವರೆಗೆ ಮೌನವಾಗಿದ್ದ ಯೋಚನೆಗಳಿಗೆ, ಅನುಭವಗಳಿಗೆ, ಅನಿಸಿಕೆಗಳಿಗೆ ಗರಿಮೂಡಿಸಿ ಅದರ ದನಿಯನ್ನು ಎಲ್ಲೆಡೆ ಪಸರಿಸುವ ಆಸೆ.
ಹೀಗಾಗಿ ನನ್ನೀ ಬ್ಲಾಗ್ಗೆ ಮೌನಧ್ವನಿ ಎಂದೇ ಹೆಸರಿಟ್ಟಿದ್ದೇನೆ. ದನಿ ನಿಧಾನವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಿಮ್ಮ ಮೇಲೇ ಹಾಕುತ್ತಿದ್ದೇನೆ. ನಿಮ್ಮ ಮಾತುಗಳಿಗೆ, ನಿಮ್ಮ ಕಳಕಳಿಯ ಹಿತನುಡಿಗಳಿಗೆ ನಾನೆಂದೂ ಸಿದ್ಧ. ನೀವೂ ನನ್ನ ಜೊತೆಗಿದ್ದು ಬರವಣಿಗೆಯ ಆಸೆಗೆ ಗರಿ ನೀಡುತ್ತೀರಿ ಎಂದು ನಂಬಿದ್ದೇನೆ.
ಇಂತಿ ನಿಮ್ಮ ಪ್ರೀತಿಯ ಮೌನ, ದನಿಯಾಗಿ......
Thursday 3 December 2009
Subscribe to:
Post Comments (Atom)
1 comment:
bad pagination writting is so nice,next time u do very well
Post a Comment